Monday, October 26, 2009

‘ಮನಸಾರೆ’ ಹೇಳ್ತೀನಿ.. ಇದೊಂದು ಐಲು-ಪೈಲು ಚಿತ್ರ


ಮಾಧ್ಯಮಗಳೆಲ್ಲ ‘ಬೊಬ್ಬೆ ಹೊಡೆದು ಪ್ರೇಕ್ಷಕರನ್ನು ಥಿಯೇಟರ್ ಗಳಿಗೆ ಮುಗಿ ಬೀಳುವಂತೆ ಶತ ಪ್ರಯತ್ನ ಮಾಡುತ್ತಿದ್ದರೆ ಅತ್ತ ಬ್ಲಾಕ್ ಟಿಕೆಟ್ ತಗೊಂಡು ಚಿತ್ರ ನೋಡೋ ವೀಕ್ಷಕರಿಗೆ ತಲೆ ಚಚ್ಚಿಕೊಳ್ಳುವುದೊಂದೆ ಬಾಕಿ...

ಇದು ಭಟ್ಟರ ಬಹು(ಹುಸಿ)ನಿರೀಕ್ಷಿತ ’ಮನಸಾರೆ’ ಚಿತ್ರದ ಒನ್‌ಲೈನ್‌ ನ್ಯೂಸ್‌. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ (ಹುಟ್ಟಿಸುವಂತೆ ಮಾಡಿದ್ದ) ಮನಸಾರೆ ಚಿತ್ರ ತೋಪೇಳುವುದು ಗ್ಯಾರಂಟಿ ಎನಿಸ್ತಿದೆ. ಅಭಿಮಾನಿ ದೇವರುಗಳನ್ನು ಪೀಡಿಸುವ ಯಾವ ಚಿತ್ರವೂ ಅದೇನೆ ಬೊಬ್ಬೆ ಹಾಕಿದರೂ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ. ಇದು ’ಮನಸಾರೆ’ಗೂ ಅನ್ವಯಿಸುತ್ತದೆ.
ಲಾಜಿಕ್‌ ಇಲ್ಲದೆ ಹರಿಯುವ ಸಂಭಾಷಣೆಯ ಝರಿ, ಪೋಲಿ ಪೋಲಿ ಡೈಲಾಗ್‌ಗಳು, ಅನಿವಾರ್ಯತೆಯೇ ಇಲ್ಲದೆ ಧುತ್ತನೆ ಎದುರಾಗುವ ಹಾಡು, ಒಂದು ಆಸ್ಪತ್ರೆಯ ಸುತ್ತ ಚಿತ್ರದ ಬಹುತೇಕ ರೀಲ್‌ ಮುಗಿಸುವ ನಿರ್ದೇಶಕ, ಕಂಬಕ್ಕೆ ಕಟ್ಟಿದ ಎಮ್ಮೆ ಎಳೆದಾಡುವಂತೆ ’ಕಾಮನಬಿಲ್ಲಿನ’ ಸುತ್ತವೇ ವೀಕ್ಷಕರನ್ನು ಎಳೆದಾಡಿಸುವ ಕಥೆ, ಹಿರೋಯಿನ್‌ನ ಕೂದಲು ನೋಡಿಕೊಂಡೆ ಕಾಲ ಕಳೆಯುವ ಹೀರೋ, ಒಂದು ಕಟ್ಟಡವನ್ನು ಎಷ್ಟೆಲ್ಲ ಕೋನಗಳಲ್ಲಿ ತೊರಿಸಲು ಸಾಧ್ಯ ಎಂದು ‌ಪ್ರಯೋಗ ಮಾಡುತ್ತಿರುವ ಕ್ಯಾಮೆರಾಮನ್‌, ಚೆಂದದ ಸಾಹಿತ್ಯವಿದ್ದೂ ಸಂಗೀತದ ಅಬ್ಬರದಲ್ಲಿ ಅದರ ಸವಿಯನ್ನು ಮರೆಮಾಡುವ ಸಂಗೀತ ನಿರ್ದೇಶಕ.... ಇವೆಲ್ಲ ಮನಸಾರೆ ಚಿತ್ರದ ನೆಗೆಟಿವ್‌ ಹೈಲೈಟ್‌ಗಳು.

ಚಿತ್ರಕ್ಕೊಂದು ಚೆಂದದ ಥೀಮ್ ಇದೆ; ಮನೋರೋಗಿಗಳ ಮನದಾಳವನ್ನು ಕೆದಕುವ ಪ್ರಯತ್ನವಿದೆ; ಸಮಾಜದ ಹುಚ್ಚುತನವನ್ನು ಮನಗಾಣಿಸುವ ಒಳನೋಟಗಳಿವೆ; ಹುಚ್ಚಾಸ್ಪತ್ರೆಯ ಹುಚ್ಚಾಟಗಳಿವೆ; ಆದರೆ ಸರಿಯಾಧ ನಿರೂಪಣೆಯಿಲ್ಲ; ಸೋ ಕಾಲ್ಡ್‌ ಡೈರೆಕ್ಟರ್ ಮುಂಗಾರುಮಳೆ ಯೋಗ-ರಾಜ ಭಟ್ಟರು ಅದ್ಯಾಕೋ ನಿರೂಪಣೆಯಲ್ಲಿ ಸೋತಂತೆ ಕಾಣುತ್ತಿದೆ..
ಚಿತ್ರ ಆರಂಭವಾದೊಡನೆ ಶುರುವಾಗುವ “ಪಾ..ರ..ಪಪ್ಪ...ಪ್ಪಾ..ರ” ಹಾಡು ತನ್ನ ರಾಕಿಂಗ್‌ ಶೈಲಿಯ ಸಂಗೀತದೊಂದಿಗೆ ಪಡ್ಡೆ ಹೈಕಳನ್ನು ಕುಣಿಸುತ್ತದೆ; ಸ್ಟುಡಿಯೋ ಸೆಟಪ್‌ ವಿಭಿನ್ನವಾಗಿದೆ. ಒಟ್ಟಿನಲ್ಲಿ ವೀಕ್ಷಕರ ನರನಾಡಿಗಳು ಮಿಡಿಯುವಂಥ ಹಾಡಿನೊಂದಿಗೆ ಆರಂಭವಾಗುವ ಈ ಚಿತ್ರ ಆರಂಭದಲ್ಲೇ ಆಹಾ ಬೊಂಬಾಟ್‌!!! ಅನ್ಸಿದ್ರೆ ಆಶ್ಚರ್ಯವಿಲ್ಲ. ಆದರೆ ಕೆಲವೇ ನಿಮಿಷಗಳಲ್ಲಿ ಅದರ ನಿಜ ಬಂಡವಾಳ ಬಯಲಾಗಿ ಬಿಡುತ್ತೆ.

ಇನ್ನು ಈ ಚಿತ್ರಕ್ಕೆ ಭಟ್ಟರದೇ ಸಂಭಾಷಣೆ. ಅದೇನು ಭಟ್ಟರು ಕುಡಿದ ಅಮಲಿನಲ್ಲಿ ಡೈಲಾಗ್‌ಗಳನ್ನು ಬರೆದರೋ ಏನೋ ಗೊತ್ತಿಲ್ಲ. ಅಂತೂ ತೀರ ಪೋಲಿ ಡೈಲಾಗ್‌ಗಳು ಕುಟುಂಬ ಸದಸ್ಯರೊಡನೆ ಕುಳಿತು ನೋಡುವುವರಿಗೆ ಮುಜುಗರ ಹುಟ್ಟಿಸುವುದಂತೂ ನಿಜ. ಕೆಲವು ಡೈಲಾಗ್‌ಗಳು ಎಲ್ಲೋ ಅಧ್ಯಾತ್ಮಿಕ ಲೆಕ್ಚರ್ ಕೊಡತ್ತಿರುವಂತೆ ಭಾಸವಾಗುತ್ತವೆ. ಯಾವುದೋ ತತ್ವಪದಕಾರರು ಭಟ್ಟರ ಮೈಮೇಲೆ ಬಂದು ಬರೆಸಿದರೋ ಏನೋ ಗೊತ್ತಿಲ್ಲ ಬದುಕಿನ ರಹಸ್ಯಗಳನ್ನು ಬೇಧಿಸುವಂತ ಸಂಭಾಷಣೆಗಳನ್ನು ತೀರ ಸರಳವಾಗಿ ಧಾರವಾಡ ಶೈಲಿಯಲ್ಲಿ ಹೇಳುವುದು ಚೆಂದ ಎನಿಸಿದರೂ ಎಷ್ಟು ಜನರಿಗೆ ಅರ್ಥವಾಗುತ್ತದೆ ಎನ್ನುವುದು ಇಲ್ಲಿನ ಪ್ರಶ್ನೆ.
ಜಯಂತ ಕಾಯ್ಕಿಣಿ ಬರೆದಿರುವ ಚಿತ್ರದ ಹಾಡುಗಳು ಇಂಪಾಗಿವೆ. ಸಾಹಿತ್ಯ ಮನಮುಟ್ಟುವಂತಿದೆ. ಆದರೆ ಸಂಗೀತದ ಅಬ್ಬರದಲ್ಲಿ ಸಾಹಿತ್ಯದ ಸವಿ ಸವಿಯಲು ಆಗುವುದೇ ಇಲ್ಲ. ಯಾಕಂದ್ರೆ ಇದರ ಲಿರಿಕ್ಸ್‌ ಅರ್ಥವೇ ಆಗುವುದಿಲ್ಲ. ಭಾವನೆಗಳನ್ನು ನವಿರಾಗಿ ಹಿಡಿದಿಡುವುದರಲ್ಲಿ ಕಾಯ್ಕಿಣಿ ಪಳಗಿದ ಕೈ ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಅದು ಇಲ್ಲೂ ಸಾಬೀತಾಗಿದೆ. ’ಎಲ್ಲೋ ಮಳೆಯಾಗಿದೆ..’ ಕಾಡುತ್ತೆ. ಇನ್ನು ಮನೋಮೂರ್ತಿಯವರ ಸಂಗೀತ ಮಾಮೂಲಿನಂತೆ ಮಧುರವಾಗಿದೆ. ಆದರೆ ಎಲ್ಲೋ ಹಳೆಯ ಟ್ಯೂನ್‌ಗಳು ಇಲ್ಲಿ ಮರುಕಳಿಸಿವೆ ಎನ್ನಿಸುವುದಂತೂ ಸತ್ಯ. ಹಾಡುಗಳು ಎಲ್ಲೆಂದರಲ್ಲಿ ಧತ್ತೆಂದು ಬರುವುದು ಸ್ವಲ್ಪ ಕಿರಿ ಕಿರಿ ಎನಿಸುತ್ತದೆ. ಎಷ್ಟೋ ಸಂದರ್ಭದಲ್ಲಿ ಹಾಡಿನ ಅಗತ್ಯವೇ ಕಾಣುವುದಿಲ್ಲ. ಛಾಯಾಗ್ರಾಹಕನಿಗೆ ಹೆಚ್ಚಿನ ಕೆಲಸವೇನೂ ಇಲ್ಲ. ಯಾಕೆ ಅಂದ್ರೆ ಇಡೀ ಚಿತ್ರ ಹುಚ್ಚಾಸ್ಪತ್ತೆಯೊಂದರ ಸುತ್ತವೇ ಗಿರಕಿ ಹೊಡೆಯುತ್ತದೆ. ಹಾಗಾಗಿ ಅವ್ರಿಗೂ ಅದೇ ಕಾಮನಬಿಲ್ಲು ಕಟ್ಟಡವನ್ನು ಪದೇ ಪದೇ ಬೇರೆ ಬೇರೆ ಕೋನಗಳಲ್ಲಿ ತೋರಿಸದೆ ವಿಧಿಯಿಲ್ಲ. ವೀಕ್ಷಕರಿಗೆ ನೋಡದೆ ವಿಧಿಯಿಲ್ಲ.

ನಟನೆಯ ವಿಷಯಕ್ಕೆ ಬಂದರೆ ಮಾಗಿದ ನಟನೆ ಎಲ್ಲೂ ಕಂಡುಬರುವುದಿಲ್ಲ. ಇತ್ತೀಚೆಗಷ್ಟೆ ನಾಯಕನಟನಾಗಿರುವ ದಿಗಂತ್‌ ಹೆಚ್ಚು ಲವಲವಿಕೆಯಿಂದ ನಟಿಸಿದ್ದಾರೆ. ಡೈಲಾಗ್‌ ಡಿಲಿವರಿಯಲ್ಲಿ ಸರಾಗವಿದೆ. ಆದರೆ ಗಣೇಶನ ಮುಂಗಾರಮಳೆ ಸ್ಟೈಲ್‌ ಕಾಪಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಡೈಲಾಗ್‌ ಹೇಳುವ ಶೈಲಿಯೇ ಬಹಿರಂಗ ಪಡಿಸುತ್ತದೆ. ಆದರೆ ಡೈಲಾಗ್‌ ಹೇಳುವ ಸ್ಪೀಡ್‌ ಜಾಸ್ತಿಯಾಗಿದೆ. ಒಂದು ಡೈಲಾಗ್‌ ಅನ್ನು ಸವಿಯುವ ಮುನ್ನವೇ ಪೌರಾಣಿಕ ಚಿತ್ರದಲ್ಲಿ ಬರುವ ಸರಳುಗಳ ಸರಣಿಯಂತೆ ನುಗ್ಗಿ ಬರುವ ಡೈಲಾಗ್‌ಗಳು ಅದರ ಸವಿಯನ್ನು ವೀಕ್ಷಕರಿಗೆ ತಟ್ಟುವುದೇ ಇಲ್ಲ. ಆಂದ್ರಿತಾ ರೇ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ಹಾಡನಲ್ಲಂತೂ ಸ್ವಲ್ಪ ಜಾಸ್ತಿನೇ ಎಕ್ಸ್ಪೋಸ್‌ ಆಗಿದ್ದಾರೆ. ನೋಡುಗರ ಮೈ ಬಿಸಿ ಏರುತ್ತದೆ. ಗಂಡಸರನ್ನು ಅತಿಯಾಗಿ ದ್ವೇಷಿಸುವ ಇವರು ಸಿಕ್ಕವರನ್ನೆಲ್ಲಾ ಚಾಕುವಿನಿಂದ ಚುಚ್ಚಲು ಹೋಗಿ ಸ್ವಲ್ಪ ಹೊತ್ತಿನ ನಂತರ ’ಸಾರಿ..ಸಾರಿ’ ಎಂದು ಅಳುವ ಅವರ ಅಮಾಯಕತೆ ಅಯ್ಯೋ ಎನಿಸುತ್ತದೆ. ಹುಬ್ಬಳ್ಳಿಯಂವ ಶಂಕರಣ್ಣ ತನ್ನ ಅಪ್ಪಟ ಉತ್ತರ ಕರ್ನಾಟಕ ಶೈಲಿಯಿಂದ ಬೇಸತ್ತ ಮುಖಗಳಲ್ಲಿ ನಗೆಯ ಸಿಂಚನ ಮೂಡಿಸುತ್ತಾರೆ. ಹುಚ್ಚಾಸ್ಪತ್ರೆಯಲ್ಲಿ ಬರುವ ಕೆಲವು ವಿಚಿತ್ರ ಪಾತ್ರಗಳು ಎಂದರೆ, ಎಸ್ಕೇಪ್‌ ರಾಜನ ಎಸ್ಕೇಪ್‌ ಐಡಿಯಾ, ಒಬ್ಬ ಹುಚ್ಚನ ’ನಂಗೆ ಬಟ್ಟೆ ಬೇಡಾ.. ’ ಎಂದು ಕಿರುಚುವ ಡೈಲಾಗ್ ಚಿತ್ರದುದ್ದಕ್ಕೂ ರಿಪೀಟ್‌ ಆಗಿದ್ದರೂ ಬೋರು ಎನಿಸುವುದಿಲ್ಲ. ಅಲ್ಲದೆ ಚಿತ್ರಕ್ಕೆ ಲವಲವಿಕೆ ತಂದು ಕೊಟ್ಟಿವೆ. ಬೀದಿಯಲ್ಲಿ ವಿದ್ಯುತ್‌ ತಯಾರಿಸುವ ಹೊಸ ಐಡಿಯಾ ಚೆನ್ನಾಗಿದೆ.

ಒಂದಿಷ್ಟು ಕಥೆಯ ಹೂರಣ...

ಮದುವೆ ಪಂಕ್ಷನ್‌ನಲ್ಲಿ ಹೀರೋ ’ಜೀವನ ಪಾಠ’ದ ಪ್ರವಚನದೊಂದಿಕೆ ಆರಂಭವಾಗುವ ಕಥೆ ಇದ್ದಕ್ಕಿದ್ದಂತೆ ಎಲ್ಲೆಲ್ಲೂ ಹರಿಯುತ್ತದೆ.ಏನಾಯ್ತು? ಯಾಕಾಯ್ತು? ಎಂದು ವೀಕ್ಷಕರು ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ಮತ್ತೇನೋ ಆಗಿಬಿಟ್ಟಿರುತ್ತದೆ. ಸಿನಿಮೀಯ ನಿಯಮದಂತೆ ಅಚಾನಕ್ಕಾಗಿ ಹೀರೋ (ದಿಗಂತ್‌) ದಟ್ಟ ಕಾಡಿನ ಮಧ್ಯೆ ಇರುವ ಮಾನಸಿಕ ಚಿಕಿತ್ಸಾ ಕೇಂದ್ರವೊಂದರ ಅತಿಥಿಯಾಗ್ತಾನೆ. ಅಲ್ಲಿ ಅವನೊಂದಿಗೆ ಒಂದಷ್ಟು ಹರಟೆ ಹೊಡೆಯಲು ಕೆಲವು ಸಹ-ಹುಚ್ಚರು, ಇನ್ನೇನು ಹೇಗೋ ಅಲ್ಲಿಂದ ಎಸ್ಕೇಪ್‌ ಆಗ್ಬೇಕು... ಅಲ್ಲಿ ಒಬ್ಬಳು ಸುಂದರ ಹುಚ್ಚಿ ಐ ಮೀನ್‌ ಹೀರೋಯಿನ್‌ (ಆಂದ್ರಿತಾ ರೇ), ಯಥಾಪ್ರಕಾರ ಅವಳು ಹೀರೋ ಕಣ್ಣಿಗೆ ಬೀಳುತ್ತಾಳೆ. ಅವಳ ಮೋಹಕ ಹೆರಳಿಗೆ ಮರುಳಾದ ಹೀರೋ ’ಹಾಳಾಗಿ’ ಹೋಗ್ತಾನೆ. ಅಲ್ಲಿಗೆ ಶುರು ಅವನ ಪ್ರೇಮ ಪರಸಂಗ.

ಚಿತ್ರ ಆರಂಭದಲ್ಲಿ ಹಿರೋ ಜೀವನ, ಮದುವೆ, ಹೆಂಡತಿ, ಪ್ರೀತಿ... ಮುಂತಾಗಿ ಕೊಡುವ ಲೆಕ್ಚರ್ ಸತ್ಯ ಎನಿಸಿದರೂ ತೀರಾ ಉಡಾಫೆಯಾಗಿದೆ. ಚಿತ್ರದ ಬಹುತೇಕ ಕತೆ ಕಾಡಿನ ಮಧ್ಯೆ ಇರುವ ಹುಚ್ಚರ ಸಂತೆಯಲ್ಲೇ ಗಿರಕಿ ಹೊಡೆಯುತ್ತದೆ. ಇದರೊಂದಿಗೆ ನೋಡುಗರ ತಲೆಯನ್ನೂ ಗಿರಕಿ ಹೊಡೆಸುತ್ತದೆ. ಇದರಿಂದ ಬಿಡುಗಡೆ ಸಿಕ್ಕರೆ ಸಾಕು ಎಂದು ವೀಕ್ಷಕ ಅಂದುಕೊಳ್ಳುತ್ತಿರುವಾಗಲೇ ನಾಯಕ ನಾಯಕಿಯನ್ನು ಅಲ್ಲಿಂದ ಎಸ್ಕೇಪ್‌ ಮಾಡಿಕೊಂಡು ಬರುತ್ತಾನೆ. ನೋಡುಗರಿಗೆ ಏನೋ ಒಂದು ರೀತಿಯ ಸಮಾಧಾನ. ಅಂತೂ ಕಥೆ ಈಗಲಾದರೂ ಮತ್ತೊಂದು ಮಗ್ಗುಲಿಗೆ ಹೊರಳಿತಲ್ಲ ಎಂದು. ಹೀರೋಯಿನ್‌ ಹೇಳಿದ ಕಡೆಯೆಲ್ಲ 105ಆಂಬುಲೆನ್ಸ್‌ ಓಡಿಸುವ ನಾಯಕ ಕೊನೆಗೆ ಡೀಸೆಲ್‌ ಮುಗಿದಾಗ ಅದನ್ನು ಅಲ್ಲೆಲ್ಲೋ ಬಿಟ್ಟು ಫ್ಲಾಶ್‌ಬ್ಯಾಕ್‌ ಹಿಡಿದು ಹೊರಡುತ್ತಾರೆ. ಆಂಧ್ರಿತ ತನ್ನ ಪಾಳು ಮನೆಗೆ ಹೋಗಿ ಅಲ್ಲಿ ಅಪ್ಪ-ಅಮ್ಮನ ಜಗಳ, ತಂದೆಯ ಕ್ರೌರ್ಯವನ್ನು ನೆನಪಿಸಿಕೊಳ್ಳುವ ದೃಶ್ಯಗಳು ಭಾವನೆಗಳನ್ನು ಕೆದಕುತ್ತವೆ. ಇಲ್ಲಿಂದ ಮುಂದೆ ನಿರ್ಜನ ರಸ್ತೆಯಲ್ಲಿ ಹುಡುಗರ ಪ್ರೇಮ ಪುರಾಣದ ಕುರಿತು ಹೀರೋನ ತಡೆಯಿಲ್ಲದ ವಾಗ್ಝರಿ ಕೆಳಲು ಇಷ್ಟವಾಗುತ್ತವೆ (ನನ್ನಂಥ ಬಿಸಿರಕ್ತದ ಯುವಕರಿಗೆ). ಇಲ್ಲಿ ವೀಕ್ಷಕರ ಮಹಾಪ್ರಭುಗಳ ಊಹೆಗಳು ಗರಿಗೆದರುತ್ತವೆ. ಇಬ್ಬರೂ ಕಾಡಿನಲ್ಲಿ ಅಲೆಯುತ್ತಾ ತಿರುಗುತ್ತಾರೆ. ಏಕಾಂತ ಕಾಡಿನಲ್ಲಿ ಒಂದಷ್ಟು ರೊಮ್ಯಾಂಟಿಕ್ ಕ್ಷಣಗಳನ್ನು ಸವಿಯಬಹುದು, ಕೆಲವು ಮಧುರವಾಧ ’ಲವ್‌’ಲಿ ಮಾತುಗಳನ್ನು ಕೇಳಬಹುದು, ಕಾಡಿನ ಏಕಾಂತತೆಯಲ್ಲಿ ಆ ಹುಚ್ಚರ ಪ್ರೀತಿಯ ಆಪ್ತ ಅಪ್ಪುಗೆಯನ್ನು ಸವಿಯಬಹುದು,.. ಇನ್ನು ಏನೇನೋ ಊಹೆಗಳು ನೆಲೆಸಿಬಿಡುತ್ತವೆ. ನಾಯಕಿಯಂತೂ ’ನಡಿ ಆಸ್ಪತ್ರೆಗೆ ಹೋಗೋಣ’ ಎಂದು ದುಂಬಾಲು ಬಿದ್ದು ’ಕಾಮನಬಿಲ್ಲಿ’ನ (ಹುಚ್ಚಾಸ್ಪತ್ರೆ) ಅಂಚಿಗೂ ಬಂದು ಬಿಡುತ್ತಾಳೆ. ನಾಯಕ ’ಬೇಡ ಬನ್ರಿ ಹೋಗೋಣ’ ಎಂದು ಗೋಗರೆಯುತ್ತಿರುತ್ತಾನೆ.

ಇಲ್ಲಿ ಹೀರೋಯಿನ್‌ ಮನಸ್ಸು ಬದಲಾಯಿತು.. ಇಬ್ಬರೂ ಗೂಡಿನಿಂದಾರಿತ ಸ್ವಚ್ಛಂದ ಪಕ್ಷಿಗಳಾಗುತ್ತಾರೆ ಎಂದು ಎಲ್ಲ ಕಣ್ಣುಗಳು ಕಾತರದಿಂದ ಕಾಯುತ್ತಿರುತ್ತವೆ. ಆಗ.... ಅವಳು ಮತ್ತೆ ಅದೇ ಹುಚ್ಚರ ಸಂತೆಗೇ ಹೊರಟೇ ಹೊಗುತ್ತಾಳೆ. ಇಲ್ಲಿಗೆ ಚಿತ್ರದ ಬಗ್ಗೆ ವೀಕ್ಷಕರ ನಿರೀಕ್ಷೆ ನಿಂತುಬಿಡುತ್ತದೆ. ತಾಳ್ಮೆ ಪಾದದಡಿಗೆ ಸಿಲುಕಿ ಭಟ್ಟರ ಬೈಗುಳ ಆರಂಭವಾಗುತ್ತವೆ. ವೀಕ್ಷಕರೆ ಕಲ್ಪನೆಗೆ ವಿರುದ್ಧವಾಗಿ, ಅನಿರೀಕ್ಷಿತವಾಗಿ ನಡೆಯುವುದೇ ಚಿತ್ರದ ಹಗ್ಗಳಿಕೆಯೇ? ಕೆಲವು ಸಿದ್ಧ ಮಾದರಿಗಳನ್ನು ಮುರಿಯಬಾರದು. ಅದನ್ನು ವೀಕ್ಷಕರು ಅಷ್ಟು ಒಪ್ಪಿಕೊಳ್ಳುವುದಿಲ್ಲ ಎನ್ನುವ ಸತ್ಯ ಭಟ್ಟರಿಗೆ ಗೊತಿಲ್ಲ ಎನಿಸುತ್ತದೆ.

1 comment:

  1. dabba review ..
    movie is into it's 6th week. It has earned close to 7 crores already. Everyday people send me congratulatory messages for the movie. This is a dabba review

    ReplyDelete