Monday, December 14, 2009

'ವಿಸ್ಮಯ’ಗಳ ಜಾಡಿನಲ್ಲಿ...

ಇದು ವೈಜ್ಞಾನಿಕ ಯುಗ. ಎಲ್ಲಿ ನೋಡಿದರೂ ವಿಜ್ಞಾನ-ತಂತ್ರಜ್ಞಾನದ ಚಮತ್ಕಾರಗಳು, ತಾಂತ್ರಿಕ ಉಪಕರಣಗಳು, ಎಲ್ಲದ್ದಕ್ಕೂ ತಂತ್ರಜ್ಞಾನದ ಸ್ಪರ್ಶ. ಜಗತ್ತೇ ಒಂದು ಹಳ್ಳಿಯೆಂಬ ಕಲ್ಪನೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ವಿಜ್ಞಾನ-ತಂತ್ರಜ್ಞಾನಗಳು ಇಂದು ಸಾವಿನ ರಹಸ್ಯವನ್ನೂ ಬೇಧಿಸುವಲ್ಲಿ ದಾಪುಗಾಲಿಟ್ಟಿವೆ. ಅಷ್ಟರಮಟ್ಟಿಗೆ ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಬದುಕನ್ನು ಆವರಿಸಿವೆ ಆದರೆ...???

ಆದರೆ ಇದಕ್ಕೆ ಸಮನಾಗಿ ಜನರ ಮನಸ್ಸುಗಳು ಬದಲಾಗಿವೆಯೇ? ವೈಜ್ಞಾನಿಕ ದೃಷ್ಟಿಕೋನ ಅವರ ಕಣ್ಣುಗಳಲ್ಲಿ ಮಿಂಚುತ್ತಿದೆಯೇ?, ಕಣ್ಣಿಗೆ ಕಂಡ ಸತ್ಯವನ್ನು ತಾರ್ಕಿಕವಾಗಿ ಚಿಂತಿಸುವ ಮನೋಭಾವ ರೂಡಿಯಾಗಿದೆಯೇ? ಇದಕ್ಕೆ ಉತ್ತರ ಮೌನ. ನಿಜಕ್ಕೂ ಇದು ಅಚ್ಚರಿಯ ಸಂಗತಿ. ಜಗತ್ತು ಈ ಪ್ರಮಾಣದಲ್ಲಿ ಬದಲಾವಣೆ ಕಾಣುತ್ತಿದ್ದರೂ, ಅದೇಕೆ ಭಾರತೀಯರು ಮಾತ್ರ ತಮ್ಮ ಮನಸ್ಸುಗಳನ್ನು ಬದಲಾವಣೆಯಗೆ ತೆರೆಯುತ್ತಿಲ್ಲ, ಇದಕ್ಕೆ ನಾನಾ ಕಾರಣಗಳಿವೆ. ಜನರಲ್ಲಿ ಇಂದಿಗೂ ಮೌಢ್ಯ ತಂಬಿ ತುಳುಕುತ್ತಿದೆ, ಧರ್ಮ-ಶಾಸ್ತ್ರಗಳೇ ಇವರ ಬದುಕಿನ ನಿಯಂತ್ರಕ ಶಕ್ತಿಯಾಗಿ ವಿಜೃಂಭಿಸುತ್ತಿವೆ. ಮಾನವೀಯತೆಗಿಂತ ಜಾತಿ, ಕಂದಾಚಾರಗಳೇ ಮೇಲುಗೈ ಸಾಧಿಸಿವೆ. ದುರಾದೃಷ್ಟದ ಸಂಗತಿಯೆಂದರೆ ಸಮಾಜದ ಓರೆಕೋರೆಗಳನ್ನು ನೇರ ಮಾಡಬೇಕಾದ, ಸಮಾಜದ ಮುನ್ನಡೆಗೆ ಮಾರ್ಗದರ್ಶಿಯಾಗಬೇಕಾದ, ಜನರ ಹೃದಯಗಳಲ್ಲಿ ಬದಲಾವಣೆಯ ಹರಿಕಾರನಾಗಬೇಕಾದ ಮಾಧ್ಯಮಗಳೂ ಕೂಡ ಸಮಾಜದ ಯಥಾವತ್‌ ಪ್ರತಿಬಿಂಬಗಳಂತೆ ವರ್ತಿಸುತ್ತಿವೆ. ಇದಕ್ಕೆ ಸ್ಪಷ್ಟ ನಿದರ್ಶನ. ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ’ಅತಿಮಾನುಷ’ ಹಂದರವುಳ್ಳ ಕಾರ್ಯಕ್ರಮಗಳು.

ಈ ಅತಿಮಾನುಷ ಕಾರ್ಯಕ್ರಮಗಳನ್ನು ನೋಡಿದರೆ ಕನ್ನಡದ ಬಹುತೇಕ ವಾಹಿನಿಗಳೂ ಮೌಢ್ಯತೆಯನ್ನು ಬಿತ್ತುವ ಕಾಯಕದಲ್ಲಿ ಪೈಪೋಟಿಗೆ ಬಿದ್ದಿರುವಂತೆ ಕಾಣುತ್ತಿದೆ. ಜನರ ಮನಸ್ಸುಗಳಲ್ಲಿ ವೈಜ್ಞಾನಿಕ ಮನೋಧರ್ಮ ಬಿತ್ತುವ ಬದಲು ಕೆಲವು ವಿಚಿತ್ರ, ಅಸಹಜ ಘಟನೆಗಳನ್ನೇ ಅತಿಮಾನುವ ಎಂದು ಬಿಂಬಿಸಿ ಜನರ ನಂಬಿಕೆಗೆ ನೀರೆರೆಯುವ ಕೆಲಸವನ್ನು ಈ ಕಾರ್ಯಕ್ರಮಗಳು ಮಾಡುತ್ತಿವೆ. ಇಂಥದ್ದೊಂದು ಪರಂಪರೆಗೆ ಶಂಕುಸ್ಥಾಪನೆ ಮಾಡಿದ್ದು ಟಿವಿ9. ಈ ವಾಹಿನಿಯ ’ಹೀಗೂ ಉಂಟೆ’ ಭರ್ಜರಿ ಯಶಸ್ಸು ಸಾಧಿಸಿತು. ರಾಜ್ಯದ ಮನೆ ಮನೆಯಲ್ಲೂ ಕಾರ್ಯಕ್ರಮಕ್ಕೆ ಕಾದುಕುಳಿತುಕೊಳ್ಳುವಂಥ ಪರಿಸ್ಥಿತಿ ನಿರ್ಮಾಣವಾಯಿತು. ಹೀಗೂ ಉಂಟೆ ಕಾರ್ಯಕ್ರಮದಲ್ಲಿ ಪ್ರಸಾರವಾದ ಮರುದಿನ ಆ ಸ್ಥಳದಲ್ಲಿ ಜನಜಾತ್ರೆಯೇ ನೆರೆದಿರುತ್ತದೆ. ಯಾರ ಗಮನಕ್ಕೂ ಬಾರದೆ ಯಾವುದೇ ಹಳ್ಳಿಯೊಂದರಲ್ಲಿದ್ದ ದೇವಸ್ಥಾನ ಸಂಕಷ್ಟದಲ್ಲಿರುವವರಿಗೆ ಪವಿತ್ರ ಸ್ಥಳವಾಗಿರುತ್ತದೆ, ’ಅತಿ’ಮಾನುಷ ವ್ಯಕ್ತಿಯೋ ಇಲ್ಲ ಪವಾಡ ಪುರುಷನೋ ಬೆಳಗಾಗುವುದರೊಳಗೆ ಜನಪ್ರಿಯನಾಗಿಬಿಡುತ್ತಾನೆ. ಈ ಕಾರ್ಯಕ್ರಮದ ಅದ್ಭುತ ಪಾಪುಲಾರಿಟಿಯನ್ನು ಕಂಡ ಇತರ ವಾಹಿನಿಗಳು ತಾವೂ ಇಂಥದೇ ಕಾರ್ಯಕ್ರಮವನ್ನು ಆರಂಭಿಸಿಯೇ ಬಿಟ್ಟವು. ರಾಜ್ಯದ ಮೂಲೆ ಮೂಲೆಯಲ್ಲಿರುವ ’ತರ್ಕಕ್ಕೆ ನಿಲುಕದ, ಅಗೋಚರ, ವಿಸ್ಮಯ, ಭಯಾನಕ, ಅದ್ಭುತ’ ಘಟನೆ, ವ್ಯಕ್ತಿಗಳನ್ನು ಹುಡುಕಲು ಆರಂಭಿಸಿದವು. ಈವರೆಗೆ ಈ ರೀತಿ ’ಕಂಡುಹಿಡಿಯಲಾದ’ ಪವಿತ್ರ ಸ್ಥಳಗಳೆಷ್ಟೋ, ಪವಾಡ ಪುರಷರೆಷ್ಟೋ. ಇನ್ನು ಮುಂದೆ ಕನ್ನಡಿಗರಿಗೆ ಯಾವ ಸಮಸ್ಯೆಗಳೂ ಇರುವುದಿಲ್ಲ.

ಇದೀಗ ಸುವರ್ಣ ವಾಹಿನಿಯೂ ಈ ಪರಂಪರೆಗೆ ಸೇರಿಕೊಂಡಿದ್ದರೂ ತನ್ನದೇ ಹೊಸ ಹಾದಿಯನ್ನು ಹಿಡಿದಿದೆ. ’ನಡೆದದ್ದೇನು’ ಹೆಸರಿನ ಕಾರ್ಯಕ್ರಮ ’ವಿಸ್ಮಯ’ ಸರಣಿಯ ಕಾರ್ಯಕ್ರಮವಾದರೂ ಇದರ ಪ್ರಸ್ತುತಿ ಮಾತ್ರ ಸಂಪೂರ್ಣ ಭಿನ್ನ. ’ನಡೆದದ್ದೇನು’ ಸುವರ್ಣ ವಾಹಿನಿಯಲ್ಲಿ ಈಗಷ್ಟೇ ಆರಂಭವಾಗಿದೆ. ನಿರೂಪಣೆ ವಿಶಿಷ್ಟವಾಗಿದೆ. ಬೆಳಕಿನ ಸಂಯೋಜನೆ, ನಿರೂಪಕನ ಹಿಂಬದಿಯ ಟಿವಿ ಇವೆಲ್ಲ ನಿರೂಪಣೆಯನ್ನು ಆಕರ್ಷಕವಾಗಿಸಿವೆ. ನಿರೂಪಕನಿಗೆ ನಿರೂಪಣೆಯಲ್ಲಿ ಇನ್ನೂ ಲಯ ಸಿಕ್ಕಿಲ್ಲ. ಸ್ಕ್ರಿಪ್ಟ್‌ ಮತ್ತಷ್ಟು ಬಿಗಿಯಾಗಬೇಕು, ಇನ್ನು ಬೆಳಕಿಲ ಪ್ರದೀಪ್‌ ನೀಡಿರುವ ಹಿನ್ನೆಲೆ ಧ್ವನಿ ಚೆನ್ನಾಗಿದೆ. ಯಾವುದೇ ವಿಷಯವನ್ನು ಪ್ರಸ್ತುತಪಡಿಸುವಾಗ, ಘಟನೆಗಳನ್ನು ಚಿತ್ರಗಳ ರೂಪದಲ್ಲಿ ಮರುಸೃಷ್ಟಿ ಮಾಡುವುದು ನನಗೆ ತಿಳಿದ ಮಟ್ಟಿಗೆ ಕನ್ನಡ ಟಿವಿ ಮಾಧ್ಯಮದಲ್ಲೇ ವಿನೂತನ ಪ್ರಯೋಗ. ಇದು ಕಾರ್ಯಕ್ರಮಕ್ಕೆ ಕಲಾತ್ಮಕತೆಯನ್ನು ತಂದುಕೊಟ್ಟಿರುವುದಲ್ಲದೆ, ಚಿತ್ರೀಕರಣದಲ್ಲಿ ಮರುಸೃಷ್ಟಿಸಲು ಸಾಧ್ಯವಾಗದ ಎಷ್ಟೋ ಸನ್ನಿವೇಶಗಳನ್ನು ಇದರಿಂದ ಮರುಸೃಷ್ಟಿಸಲು ಸಾಧ್ಯ.

ಸುವರ್ಣ ವಾಹಿನಿಯ ಈ ಕಾರ್ಯಕ್ರಮ ಕರ್ನಾಟಕದಾಚೆಗಿನ ಪ್ರಕರಣಗಳನ್ನು ಕನ್ನಡಿಗರ ಮುಂದಿಡುತ್ತಿದೆ. ಈ ದೃಷ್ಟಿಯಿಂದ ಈ ಕಾರ್ಯಕ್ರಮ ತನ್ನ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇದೆಲ್ಲಕ್ಕಿಂತ ಬಹಳ ಮುಖ್ಯವಾದ ಅಂಶವೆಂದರೆ, ಈ ಕಾರ್ಯಕ್ರಮ ಯಾವುದೇ ವಿಸ್ಮಯದ ವಿಚಾರಗಳನ್ನು ಎಲ್ಲ ಕೋನಗಳಲ್ಲಿ ವಿಶ್ಲೇಷಣೆಗೊಳಪಡಿಸುತ್ತದೆ. ಅತಿಮಾನುಷವೆಂದು ನಂಬಲಾಗುವ ಒಂದು ಘಟನೆಗೆ ಶಾಸ್ತ್ರ-ಸಂಪ್ರದಾಯಗಳ ವಿವರಣೆ, ಅದಕ್ಕೆ ಜನರ ನಂಬಿಕೆ ಏನೆಂಬುದನ್ನೂ ಇದು ಪ್ರಸ್ತುತಪಡಿಸುತ್ತದೆ. ಇದರ ಜೊತೆಗೆ ತಜ್ಞರಿಂದ ವೈಜ್ಞಾನಿಕವಾಗಿಯೂ ವಿಶ್ಲೇಷಿಸುವ ಇದರ ಪ್ರಯತ್ನ ಇದನ್ನು ಬೇರೆಲ್ಲ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ನಿಲ್ಲಿಸಿದೆ. ಈ ಕಾರ್ಯಕ್ರಮಕ್ಕೆ ಮಾನವೀಯ ನೆಲೆಯೂ ಇದೆ. ಇತ್ತೀಚಿನ ಒಂದು ಸಂಚಿಕೆಯಲ್ಲಿ ತೋರಿಸಿದ ’ವಾನರ ಮಾನವ’ರಿಗೆ ಸರ್ಕಾರದ ಧನಸಹಾಯ ಕೊಡಿಸಿದ್ದು ಇದಕ್ಕೊಂದು ಉದಾಹರಣೆ. ಈ ದೃಷ್ಟಿಯಲ್ಲೂ ಈ ಕಾರ್ಯಕ್ರಮ ಬೇರೆಲ್ಲವುಗಳಿಗಿಂತ ಒಂದು ಹೆಜ್ಜೆ ಮುಂದಿದೆ.

ಆದರೆ ಅಂತಿಮವಾಗಿ ಘಟನೆಯ ಸ್ವರೂಪವನ್ನು ನೇರವಾಗಿ ಹೇಳದೆ ತೀರ್ಮಾನ ನಿಮ್ಮದೇ ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಡುತ್ತದೆ. ಜನರ ನಂಬಿಕೆ, ಸಂಪ್ರದಾಯಗಳನ್ನು ಗೌರವಿಸಬೇಕು ನಿಜ. ಹಾಗೆಂದು ಅದು ಮೂಢನಂಬಿಕೆಯಾಗಿದ್ದರೆ, ಅವೈಜ್ಞಾನಿಕವಾಗಿದ್ದರೆ ಅದನ್ನು ಪೋಷಿಸುವುದು ಇಲ್ಲವೇ ನಗಣ್ಯ ಮಾಡುವುದು ಎರಡೂ ತರವಲ್ಲ. ಅತಿಮಾನುಷ ಎಂದು ನಂಬುವ ಯಾವುದೇ ಘಟನೆಯನ್ನು ಆದಷ್ಟೂ ವೈಜ್ಞಾನಿಕ ತಳಹದಿಯಲ್ಲೇ ವಿಶ್ಲೇಷಿಸುವ ಮತ್ತು ಅಂತಿಮವಾಗಿ ಅದ್ಕಕೊಂದು ತಾರ್ಕಿಕ ಅಂತ್ಯ ಕಾಣಿಸುವ ಕೆಲಸನ್ನು ಮಾಡಬೇಕು. ಆಗ ಅದು ಜನರು ಯೋಚಿಸುವಂತೆ ಮಾಡುತ್ತದೆ. ಎಲ್ಲವನ್ನೂ ತರ್ಕಿಸಿ ತೀರ್ಮಾನಿಸಬೇಕೆಂಬ ಧೋರಣೆ ಬೆಳೆಸುತ್ತದೆ. ಎಲ್ಲದ್ದಕ್ಕೂ ವೈಜ್ಞಾನಿಕ ಕಾರಣ ಹುಡುಕುವಂತೆ ಮಾಡುತ್ತದೆ.

ಈ ಜಗತ್ತಿನಲ್ಲಿ ’ತರ್ಕಕ್ಕೆ ನಿಲುಕದ, ವಿಶ್ಲೇಷಣೆಗೆ ದಕ್ಕದ, ಅನುಭವಕ್ಕೆ ಅತೀತವಾದ ಸಹಸ್ರಾರು ಸಂಗತಿಗಳಿವೆ’ಅಂದ ಮಾತ್ರಕ್ಕೆ ಅದೆಲ್ಲವೂ ಅತಿಮಾನುಷವೆಂದೇನೂ ಅಲ್ಲ. ಅದನ್ನು ತರ್ಕಕ್ಕೆ ನಿಲುಕಿಸುವ ಸಾಮರ್ಥ್ಯ ನಮಗಿನ್ನೂ ಬಂದಿಲ್ಲ, ವಿಜ್ಞಾನಕ್ಕಿನ್ನೂ ಅದು ಸಾಧ್ಯವಾಗಿಲ್ಲ ಎಂದೇ ಅರ್ಥ. ಮುಂದೊಂದು ದಿನ ಅದು ಸಾಧ್ಯವಾಗಬಹುದು. ಹೀಗಾಗಿ ತರ್ಕಾತೀತ ಘಟನೆ ಅಥವಾ ಸನ್ನಿವೇಶಗಳನ್ನು ಅತಿಮಾನುಷ ಎಂದು ಥಟ್ಟನೆ ತಿರ್ಮಾನಿಸುವುದು ಅದು ಯಾವುದೋ ಅವ್ಯಕ್ತ ಶಕ್ತಿಯ ಪವಾಡ ಎಂಬು ನಿರ್ಧರಿಸುವುದು ತರವಲ್ಲ.

No comments:

Post a Comment